ಕನ್ನಡ ಕಿರುತೆರೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ನೀಡುವಲ್ಲಿ ಹೊಸ ಹೆಜ್ಜೆ ಇರಿಸಿರುವ ಜೀ ಕನ್ನಡವಾಹಿನಿ ಇತ್ತೀಚೆಗೆ ವೀಕೆಂಡ್ ವಿಥ್ ರಮೇಶ್ ಆರಂಭಿಸಿ ಗಮನ ಸೆಳೆದಿತ್ತು. ಈಗ ಅದೇ ಪ್ರಯತ್ನದಲ್ಲಿ ಮುಂದುವರೆಯುತ್ತಾ ಶ್ರೀರಸ್ತು ಶುಭಮಸ್ತು ಎಂಬ ವಿಶೇಷ ಧಾರವಾಹಿಯನ್ನು ಇದೇ ೨೨ ರಿಂದ ಪ್ರಸಾರ ಮಾಡಲಿದೆ.
ಆರು ಜನ ಅತ್ತೆಯಂದಿರು, ಹಾಗೂ ಸೊಸೆಯ ಕಥೆ ಹೊಂದಿರುವ ಈ ಧಾರವಾಹಿಯಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೀ ಟಿ.ವಿ.ಯ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಧಾರವಾಹಿಯ ಕಲಾವಿದರ ಹಾಗೂ ತಂತ್ರಜ್ಞರ ಪರಿಚಯ ಮಾಡಿಕೊಟ್ಟರು. ಹಲವಾರು ಜನಪ್ರಿಯ ಧಾರವಾಹಿಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ಶೃತಿನಾಯ್ಡು ಈ ಸೀರಿಯಲ್ನ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಹಿರಿಯ ನಟಿ ಕಾಮಿನೀಧರನ್ ನಾಯಕನ ತಾಯಿ ಅನ್ನಪೂರ್ಣಮ್ಮನಾಗಿ ಕಾಣಿಸಿಕೊಂಡಿದ್ದು ಯುವ ಕಲಾವಿದ ನವೀನ ಮಹದೇವ ಇವರ ಪುತ್ರನಾಗಿ ಅಭಿನಯಿಸಿದ್ದಾರೆ. ಇನ್ನು ನಾಯಕಿ ಹಾಗೂ ೬ ಜನ ಮುದ್ದಿನ ಸೊಸೆಯಾಗಿ ಶ್ವೇತಾ.ಆರ್. ಪ್ರಸಾದ್ ನಟಿಸಿದ್ದು ನಾಯಕಿಯ ತಂದೆ ಪಾತ್ರವನ್ನು ಹಿರಿಯ ನಟ ಹೊನ್ನವಳ್ಳಿ ಕೃಷ್ಣ ನಿರ್ವಹಿಸಿದ್ದಾರೆ. ೬ ಜನ ಅತ್ತೆಯಂದಿರಾಗಿ ಕಾಮಿನಿಧರನ್, ಮಾಲತಿ ಸರದೇಶಪಾಂಡೆ, ಸುಧಾಬೆಳವಾಡಿ, ಸ್ವಾಮಿ, ದಿವ್ಯ, ಹಾಗೂ ಮುಸುರಿ ಕೃಷ್ಣಮೂರ್ತಿ ಅವರ ಮೊಮ್ಮಗಳಾದ ಅಂಶು ಅಭಿನಯಿಸಿದ್ದಾರೆ. ನಾಯಕಿಯ ಮಲತಾಯಿಯಾಗಿ ಶೋಭಾರಾಘವೇಂದ್ರ ಜೊತೆ ಯಶವಂತ ಸರದೇಶಪಾಂಡೆ, ಸುದೇಶ್ರಾವ್ ಪ್ರಮುಖ ಪಾತ್ರ ವರ್ಗದಲ್ಲಿದ್ದಾರೆ.
ಈ ಧಾರವಾಹಿಯ ಮತ್ತೊಂದು ವಿಶೇಷ ಏನೆಂದರೆ ಯಾವ ಹಂತದಲ್ಲೂ ನೆಗೆಟಿವ್ ಅಂಶಗಳನ್ನು ತೆಗೆದುಕೊಳ್ಳದೇ ನವಿರಾಗಿ ಕಥೆಯನ್ನು ನಿರೂಪಿಸುವುದು. ೬ ಜನ ಅತ್ತೆಯಂದಿರ ಮನವನ್ನು ಗೆದ್ದು ತನ್ನ ಗಂಡನ ಪ್ರೀತಿಯನ್ನು ನಾಯಕಿ ವಸುಧಾ ಹೇಗೆ ಪಡೆದುಕೊಳ್ಳುತ್ತಾಳೆ ಎನ್ನುವುದೇ ಈ ಧಾರವಾಹಿಯ ತಿರುಳು.